ಅಂಕೋಲಾ: ಯುವಜನತೆಯ ದೈಹಿಕ ಮತ್ತು ಮಾನಸಿಕ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ‘ಭರತ್ ಅಕಾಡೆಮಿ’ ವತಿಯಿಂದ ಸತತ ನಾಲ್ಕನೇ ವರ್ಷದ ಸಮ್ಮರ್ ಕ್ಯಾಂಪ್ ಹಾಗೂ ಅಗ್ನಿವೀರ್ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ಏಪ್ರಿಲ್ 19ರಿಂದ 27ರವರೆಗೆ 10 ದಿನಗಳ ಕಾಲ ಈ ವಿಶೇಷ ಶಿಬಿರ ನಡೆಯಲಿದೆ ಎಂದು ಮಾಜಿ ಪ್ಯಾರಾ ಕಮಾಂಡೋ ಸುಧೀರ್ ನಾಯ್ಕ ತಿಳಿಸಿದ್ದಾರೆ.

ಅವರ್ಸಾದ ಕಾತ್ಯಾಯಿನಿ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಈ ಶಿಬಿರದಲ್ಲಿ 7ರಿಂದ 30 ವರ್ಷದವರೆಗಿನ ಯುವಕರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ವಿಶೇಷವಾಗಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ದೃಢತೆ ವೃದ್ಧಿಸುವ ಉದ್ದೇಶದಿಂದ ವಿವಿಧ ಚಟುವಟಿಕೆಗಳನ್ನು ರೂಪಿಸಲಾಗಿದೆ. ಇಂದಿನ ಮಕ್ಕಳು ಪಾಠ್ಯಾಭ್ಯಾಸಕ್ಕೆ ಮಾತ್ರ ಸೀಮಿತವಾಗುತ್ತಿರುವ ಹಿನ್ನೆಲೆ, ಅವರಲ್ಲಿ ಫಿಟ್ನೆಸ್ ಕೊರತೆಯನ್ನು ನಿವಾರಿಸಲು ಈ ಶಿಬಿರ ಸಹಕಾರಿ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

ಶಿಬಿರದಲ್ಲಿ ದೇಶಭಕ್ತಿ, ಮಾರ್ಚಿಂಗ್, ಸಲ್ಯೂಟ್ ವಿಧಾನ, ತುರ್ತು ಪರಿಸ್ಥಿತಿಗಳಲ್ಲಿ ಸಮರ್ಥವಾಗಿ ನಿರ್ವಹಿಸುವ ತರಬೇತಿಯನ್ನು ನೀಡಲಾಗುತ್ತದೆ. ಜೊತೆಗೆ ಸೇನೆ, ನೌಕಾಪಡೆ, ವಾಯುಪಡೆ, ಪೊಲೀಸ್ ಇಲಾಖೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಳ್ಳುವವರಿಗೆ ಲಿಖಿತ, ದೈಹಿಕ ಪರೀಕ್ಷೆ ಮತ್ತು ಸಂದರ್ಶನ ಕುರಿತು ಮಾರ್ಗದರ್ಶನ ಒದಗಿಸಲಾಗುತ್ತದೆ.
ಜಂಗಲ್ ಕ್ಯಾಂಪಿಂಗ್, ಟ್ರೆಕ್ಕಿಂಗ್, ವೈದ್ಯಕೀಯ ಸುರಕ್ಷತೆ ತರಬೇತಿ, ಹಗಲು-ರಾತ್ರಿ ರೂಟ್ ಮಾರ್ಚ್ ಮುಂತಾದ ಪ್ರಾಯೋಗಿಕ ಚಟುವಟಿಕೆಗಳೂ ಶಿಬಿರದ ಭಾಗವಾಗಿವೆ. ಇದರೊಂದಿಗೆ ಮಕ್ಕಳಲ್ಲಿರುವ ಚಿತ್ರಕಲೆ, ಕ್ರೀಡೆ, ಸಂಗೀತ ಮುಂತಾದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ.

ಈಗಾಗಲೇ ಬೆಂಗಳೂರು, ಬೆಳಗಾವಿ, ವಿಜಯಪುರ ಹಾಗೂ ರಾಜಸ್ಥಾನದಿಂದ ವಿದ್ಯಾರ್ಥಿಗಳು ಶಿಬಿರಕ್ಕೆ ನೋಂದಣಿ ಮಾಡಿಕೊಂಡಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕಾರವಾರ ಮತ್ತು ಅಂಕೋಲಾ ಭಾಗದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸುಧೀರ್ ನಾಯ್ಕ ಕರೆ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್ 094480 62766 ಹಾಗೂ ‘ಭರತ್ ಅಕಾಡೆಮಿ ಬೆಳಗಾವಿ’ ಯೂಟ್ಯೂಬ್ ಚಾನೆಲ್ ಅನ್ನು ಸಂಪರ್ಕಿಸಬಹುದಾಗಿದ್ದು, ಪೋಷಕರು ಮಕ್ಕಳನ್ನು ಇಂತಹ ತರಬೇತಿ ಶಿಬಿರಗಳಿಗೆ ಕಳುಹಿಸುವ ಮೂಲಕ ಅವರ ಭವಿಷ್ಯ ರೂಪಿಸಲು ಮುಂದಾಗಬೇಕು ಎಂದು ಅಕಾಡೆಮಿಯ ಸದಾನಂದ ನಾಯ್ಕ ಮನವಿ ಮಾಡಿದ್ದಾರೆ.
