Karwar|State Budget|Ex- MLA Roopali Naik|Reaction|ಬಿಜೆಪಿ ಸರ್ಕಾರ ಬಜೆಟ್ ನಲ್ಲಿ ಘೋಷಣೆ ಮಾಡಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮೂರು ವರ್ಷಗಳ ಕಾಲ ವಿಳಂಬ ಮಾಡಿ ಈ ಬಜೆಟ್ ನಲ್ಲಿ ಮತ್ತೆ ಘೋಷಿಸಲಾಗಿದೆ. ಆದರೆ ಜನತೆಗೆ ಸೂಪರ್ ಸ್ಪೆಷಾಲಿಟಿ ಸೌಲಭ್ಯ ದೊರೆತಾಗಲಷ್ಟೇ ಈ ಘೋಷಣೆ ಸಾರ್ಥಕವಾಗಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಸರ್ಕಾರ ಇದ್ದಾಗ ಕಾರವಾರ ಹಾಗೂ ಜಿಲ್ಲೆಯ ಮಧ್ಯವರ್ತಿ ಸ್ಥಳವಾದ ಕುಮಟಾದಲ್ಲಿ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸಿತ್ತು. ಆದರೆ ಈ ಬಜೆಟ್ ನಲ್ಲಿ ಘೋಷಣೆ ಒಂದೇ ಆಸ್ಪತ್ರೆಗೆ ಸೀಮಿತವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಯಾವುದೆ ಮಹತ್ವದ ಕೊಡುಗೆ ಇಲ್ಲ. ಪ್ರವಾಸೋದ್ಯಮ, ಪರಿಸರ ಪೂರಕ ಕೈಗಾರಿಕೆ ಸ್ಥಾಪನೆ, ಮೀನುಗಾರಿಕೆ, ತೋಟಗಾರಿಕೆಗೆ ಪ್ರಯೋಜನವಾಗುವ ಯೋಜನೆಗಳು ಇಲ್ಲ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿರುವುದು ಸಾಲದ ಬಜೆಟ್. ರಾಜ್ಯದ ಸಾಲವನ್ನು 1.32 ಲಕ್ಷ ಕೋಟಿ ರೂ.ಗೆ ಏರಿಸಿದ್ದಾರೆ. ಇದು ಸರ್ಕಾರ ದಿವಾಳಿಯಾಗಿರುವುದರ ದ್ಯೋತಕವಾಗಿದೆ. ಇನ್ನು ಈ ಸಾಲದ ಹೊರೆಯನ್ನು ಇಳಿಸಿಕೊಳ್ಳಲು ಜನರ ಮೇಲೆ ತೆರಿಗೆಯ ಭಾರ ಹೇರುವ ದಿನಗಳು ದೂರವಿಲ್ಲ ಎಂದು ರೂಪಾಲಿ ಎಸ್.ನಾಯ್ಕ ಕಳವಳ ವ್ಯಕ್ತಪಡಿಸಿದ್ದಾರೆ.
