ಫೆ.7ರಿಂದ ಆರಂಭಗೊಂಡಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ USA ವಿರುದ್ಧ ಮೊದಲ ಜಯ ಸಾಧಿಸಿರುವ ಟೀಮ್ ಇಂಡಿಯಾ, ಇಂದು (ಫೆ.12) ನಮೀಬಿಯಾ ಎದುರು ಎರಡನೇ ಪಂದ್ಯವಾಡಲು ಸಜ್ಜಾಗಿದೆ. ದೆಹಲಿಯ ಯಲ್ಲಿ ನಡೆಯುವ ಈ ಪಂದ್ಯಾವಳಿ ಸಂಜೆ 7 ಗಂಟೆಗೆ ಪ್ರಾರಂಭವಾಗಲಿದೆ. ಪಂದ್ಯಕ್ಕೆ ಭಾರತ ಸನ್ನದ್ಧಗೊಂಡಿದ್ದೇ ಆದರೂ ಅಭಿಷೇಕ್ ಶರ್ಮ ಜೊತೆಗೆ ಇನ್ನಿಬ್ಬರು ಸ್ಟಾರ್ ಆಟಗಾರರ ಅಲಭ್ಯತೆ ಸದ್ಯ ತಲೆಬಿಸಿಗೆ ಕಾರಣವಾಗಿದೆ.
ನಮಿಬಿಯಾ ವಿರುದ್ಧದ ಪಂದ್ಯಕ್ಕೆ ಅಂತಿಮ ತಂಡದಿಂದ ಮೂವರು ಪ್ರಮುಖ ಆಟಗಾರರನ್ನು ಹೊರಗಿಡುವ ಸಾಧ್ಯತೆಗಳು ಎದುರಾಗಿವೆ. ಹೊಟ್ಟೆಯ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ Abhishek Sharma, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ, ಸ್ಫೋಟಕ ಓಪನರ್ ಆಗಿ ತಂಡಕ್ಕೆ ಬಲ ತುಂಬಿದ್ದ ಅಭಿಷೇಕ್ ಜಾಗಕ್ಕೆ ಇನ್ಯಾರು ಎಂದು ಹುಡುಕುವಾಗ ಸಂಜು ಸ್ಯಾಮ್ಸನ್ ಕಣ್ಣಿಗೆ ಬಿದ್ದಿದ್ದಾರೆ. ಪ್ರಸ್ತುತ, ಅಭಿಷೇಕ್ ಸ್ಥಾನದಲ್ಲಿ ಸಂಜು ಆಡುವುದಾಗಿ ಮ್ಯಾನೇಜ್ಮೆಂಟ್ ತಿಳಿಸಿದೆ.
ಮತ್ತೊಬ್ಬ ಆರಂಭಿಕ ಆಟಗಾರ ಇಶಾನ್ ಕಿಶನ್ ಕೂಡ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಆಡುವ ಸಾಧ್ಯತೆ ಬಹುತೇಕ ಡೌಟ್ ಆಗಿದೆ. ಮಂಗಳವಾರ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಅಭ್ಯಾಸದ ಸಮಯದಲ್ಲಿ ಜಸ್ಪ್ರೀತ್ ಬುಮ್ರಾ ಎಸೆದ ಚೆಂಡಿನಿಂದ ಇಶಾನ್ ಗಾಯಗೊಂಡರು. ಅವರ ಎಡಗೈ ಹೆಬ್ಬೆರಳಿಗೆ ಪೆಟ್ಟು ಬಿದ್ದಿದ್ದು ಇದಕ್ಕಾಗಿ ಕಿಶನ್ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಪ್ರಸ್ತುತ ಚೇತರಿಸಿಕೊಳ್ಳುತ್ತಿರುವ ಆರಂಭಿಕ ಬ್ಯಾಟರ್, ನಮೀಬಿಯಾ ವಿರುದ್ಧದ ಅಂತಿಮ ತಂಡದಲ್ಲಿ ಆಡುವ ಸಾಧ್ಯತೆ ತುಂಬ ಕಡಿಮೆಯಿದೆ. ಹೀಗಾಗಿ ಅವರ ಸ್ಥಾನದಲ್ಲಿ ವಾಷಿಂಗ್ಟನ್ ಸುಂದರ್ ಆಡಬಹುದು ಎನ್ನಲಾಗಿದೆ.
ಇನ್ನು ಜ್ವರದಿಂದ ಬಳಲುತ್ತಿರುವ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಯುಎಸ್ಎ ವಿರುದ್ಧದ ಪಂದ್ಯದಿಂದ ಹೊರಗುಳಿದರು. ಅವರ ಸ್ಥಾನಕ್ಕೆ ಮೊಹಮ್ಮದ್ ಸಿರಾಜ್ ಆಯ್ಕೆ ಆದರು. ಪ್ರಸ್ತುತ, ಬುಮ್ರಾ ತಮ್ಮ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಇಂದಿನ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಅವರಾಡುವುದು ಅನುಮಾನವೇ. ಅಂತಿಮ ತಂಡದಲ್ಲಿ ಇನ್ನೂ ಅವರ ಹೆಸರು ಕೇಳಿಬಂದಿಲ್ಲ. ಹಾಗಿದ್ದಲ್ಲಿ, ಮೊಹಮ್ಮದ್ ಸಿರಾಜ್ ತಂಡದಲ್ಲಿ ಮುಂದುವರಿಯುವ ಸಾಧ್ಯತೆಗಳು ಹೆಚ್ಚಿವೆ.
