Karwar | ತಾಲೂಕಿನಲ್ಲಿ ದೇವಸ್ಥಾನ ಕಳ್ಳತನ ಪ್ರಕರಣ ಮುಂದುವರೆದಿದ್ದು, ಗ್ರಾಮಿಣ ಭಾಗದಲ್ಲಿ ಮತ್ತೇರಡು ದೇವಸ್ಥಾನಕ್ಕೆ ಕಳ್ಳರು ನುಗ್ಗಿ ಹಿತ್ತಾಳೆ, ತಾಮ್ರದ ಪೂಜಾ ಸಾಮಗ್ರಿಗಳನ್ನು ಕದ್ದೊಯ್ದ ಪ್ರಕರಣ ವರದಿಯಾಗಿದೆ.

ತಾಲೂಕಿನ ಸದಾಶಿವಗಡ ಮಾಲ್ದಾರವಾಡಾ ದಲ್ಲಿರುವ ಕಾಳೋಬಾ ದೇವಸ್ಥಾನದಲ್ಲಿ ಸಭಾಂಗಣದಲ್ಲಿಟ್ಟಿದ್ದ ಅಂದಾಜು 25 ಸಾವಿರ ಮೌಲ್ಯದ ಸುಮಾರು ನಾಲ್ಕು ಅಡಿ ಎತ್ತರದ ಹಿತ್ತಾಳೆಯ ಸಮಯವನ್ನು ಕಳ್ಳರು ಕದ್ದೊಯ್ದಿದ್ದಾರೆ. ಜೂನ್‌ 5 ರ ಬೆಳಗ್ಗೆ 9.30 ಕ್ಕೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತೆರಳಿದ ನಂತರ ಸಾಯಂಕಾಲ ಬಂದು ನೋಡಿದಾಗ ಹಿತ್ತಾಳೆ ಸಮಯ ನಾಪತ್ತೆಯಾಗಿದೆ. ಕಾಳೋಬಾ ದೇವಸ್ಥಾನ ಗಜನೀಕರ ಕುಟುಂಬದ ಕುಲದೈವವಾಗಿದೆ. ಕಳ್ಳತನವಾದ ಬಗ್ಗೆ ಮಂಗೇಶ ದತ್ತಾ ಗಜೀನಕರ್‌ ಎಂಬುವವರು ಚಿತ್ತಾಕುಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ, ತಾಲೂಕಿನ ಅಸ್ನೋಟಿಯ ವಿಠ್ಠಲ ರುಖುಮಾಯಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳುರು ಅಲ್ಲಿದ್ದ ಸುಮಾರು ನಾಲ್ಕು ಅಡಿ ಎತ್ತರದ ಹಿತ್ತಾಳೆಯ ದೊಡ್ಡ ಸಮಯ, ಹಿತ್ತಾಳೆಯ ಆರತಿ ತಟ್ಟೆಗಳು ಹಾಗೂ ನಿರಂಜನ ದೀಪ ಕಳ್ಳತನ ಮಾಡಿದ್ದಾರೆ. ಮೇ. 24 ರಂದೇ ದೇವಸ್ತಾನದ ಪೂಜಾ ವಸ್ತುಗಳು ಕಳ್ಳತನ ನಡೆದಿದೆ ಎನ್ನಲಾಗಿದ್ದು, ಜೂ.7ರಂದು ಅದು ಬೆಳಕಿಗೆ ಬಂದಿದೆ. ಅಸ್ನೋಟಿಯ ಕೊಳಗೆಯ ದೀಪಕ್ ಗೋಪಾಲ ಬಾವಾ ಎಂಬುವವರು ಚಿತ್ತಾಕುಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತಾಲೂಕಿನಲ್ಲಿ ದೇವಸ್ಥಾನ ಕಳ್ಳತನ ಪ್ರಕರಣ ಹೆಚ್ಚುತ್ತಿದ್ದು, ಕಳ್ಳರು ಕೇವಲ ದೇವಸ್ಥಾನದ ತಾಮ್ರ, ಹಿತ್ತಾಳೆಯ ಪೂಜಾ ಸಾಮಗ್ರಿಗಳನ್ನೇ ಹೊತ್ತೊಯ್ಯುತ್ತಿದ್ದಾರೆ. ಇತ್ತಿಚೇಗಷ್ಟೇ ಕೆ.ಎಸ್.ಆರ್‍.ಟಿ.ಸಿ ಡಿಪೋ ಬಳಿಯ ಹಬ್ಬುವಾಡ ರಸ್ತೆಯಲ್ಲಿರುವ ದಾಸ ಮಾರುತಿ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ಅಲ್ಲಿಟ್ಟಿದ್ದ ಸುಮಾರು ಐವತ್ತು ಕೆ.ಜಿ ತೂಕದ ಹಿತ್ತಾಳೆ, ತಾಮ್ರದ ವಸ್ತುಗಳನ್ನು ಕಳ್ಳತನ ಮಾಡಿದ್ದರು. ಇನ್ನೊಂದು ಪ್ರಕರಣದಲ್ಲಿ, ಹಾಡುಹಗಲೇ ಚೆಂಡಿಯಾದ ಜಯಮಾರುತಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು, ಅಲ್ಲಿ ತೂಗು ಹಾಕಿದ್ದ ಹಿತ್ತಾಳೆಯ ಎರಡು ಗಂಟೆಗಳನ್ನೆ ಹೊತ್ತೊಯ್ದಿದ್ದರು. ಇನ್ನು ಮೂರನೇಯ ಪ್ರಕರಣದಲ್ಲಿ ಮಖೇರಿಯ ಸಾಸನವಾಡಾದಲ್ಲಿರುವ ರಾಮಸತಿ ದೇವಿ ದೇವಸ್ಥಾನದಲ್ಲಿನ ಹಿತ್ತಾಳೆಯ ಸಮಯ ಹಾಗೂ ಗಂಟೆ ಕಳ್ಳತನವಾಗಿದ್ದನ್ನು ಸ್ಮರಿಸಬಹುದು.