ಮುಂಡಗೋಡದ ಕೊಳಗಿ ಅರಣ್ಯ ಪ್ರದೇಶದಲ್ಲಿ‌ ರುಂಡವಿಲ್ಲದ ಮಹಿಳೆಯ ಶವ ದೊರೆತ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಇಂದು‌ ಶನಿವಾರ ಭೇಟಿ ಪರಿಶೀಲನೆ ನಡೆಸಿದ್ದಾರೆ.

ನಿನ್ನೆ ಸಂಜೆಯ ವೇಳೆ ರುಂಡವಿಲ್ಲದ ಮಹಿಳೆಯ ಬೆತ್ತಲೆ ದೇಹ ಮುಂಡಗೋಡದ ಕೊಳಗಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಬಹಳಷ್ಟು ಭೀತಿ ಸೃಷ್ಠಿಸಿತ್ತು.

ಎರಡು ದಿನಗಳ ಹಿಂದೆ ಹತ್ಯೆ ಮಾಡಿ ಅರಣ್ಯದಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಬೇರೆಡೆ ಹತ್ಯೆ ಮಾಡಿ ಈ ಭಾಗದ ಅರಣ್ಯ ಪ್ರದೇಶದಲ್ಲಿ ಎಸೆದು ಹೋಗಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

ಮಾಹಿತಿ ಸಿಕ್ಕ ನಂತರ ಮುಂಡಗೋಡ ಪೋಲಿಸರು ಸ್ಥಳಕ್ಕೆ ತೆರಳಿ ಪರಿಶೀಲನೆ ಕಾರ್ಯ ನಡೆಸಿದ್ದರು.

ಮುಂಡಗೋಡ ಠಾಣೆಯಲ್ಲಿ ಗುನ್ನಾ ನಂ: 42/2026 ಕಲಂ: 103(1), 238(ಎ) ಬಿ.ಎನ್.‌ಎಸ್‌ ಪ್ರಕರಣ ದಾಖಲಾಗಿದೆ.

ಮಹಿಳೆಯ ಶವ ದೊರೆತ ಮುಂಡಗೋಡ ಕೊಳಗಿ ಗ್ರಾಮಕ್ಕೆ ಹೋಗುವ ಕ್ರಾಸ್‌ ಹತ್ತಿರ ಅರಣ್ಯ ಪ್ರದೇಶಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಭೇಟಿ ನೀಡಿ, ಪರಿಶೀಲಿಸಿ, ಪೊಲೀಸ್‌ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದ್ದಾರೆ.

ಪ್ರಕರಣ ಸಂಬಂಧಿಸಿ ಯಾವ ಪೊಲೀಸ್ ಠಾಣೆಯಲ್ಲೂ ಮಿಸ್ಸಿಂಗ್ ದೂರು ದಾಖಲಾಗದ ಕಾರಣ ಪೊಲೀಸರಿಗೆ ಮಹಿಳೆಯ ಗುರುತು ಪತ್ತೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮೇಲ್ನೋಟಕ್ಕೆ ಇದೊಂದು ಅಫೇರ್ ಸಂಬಂಧಿಸಿದ ಪ್ರಕರಣ ಎನ್ನಲಾಗಿದ್ದು, ಪ್ರಕರಣದಲ್ಲಿ ಎರಡರಿಂದ ಮೂವರು ಆರೋಪಿಗಳು ಶಾಮೀಲಾಗಿರುವ ಅನುಮಾನ ವ್ಯಕ್ತವಾಗಿದೆ.