Karwar| ಹೋಳಿ ಹಬ್ಬದ ಪ್ರಯುಕ್ತ ಸಮುದ್ರ ಸ್ನಾನಕ್ಕೆ ತೆರಳಿದ್ದ ಯುವಕರ ನಡುವೆ ಗಲಾಟೆ ನಡೆದು ಇಬ್ಬರು ಗಾಯಗೊಂಡಿರುವ ಘಟನೆ ನಗರದ RTO ಕಚೇರಿ ಎದುರಿನ ಹನುಮಾನ್ ಮೂರ್ತಿ ಇರುವ ಸಮುದ್ರ ತೀರದಲ್ಲಿ   ನಡೆದಿದೆ. 

ಕಳೇಶಿಟ್ಟಾ ಬಾಡದ ಅಕ್ಷಯ ತಂದೆ ವಿನಾಯಕ ನಾಯ್ಕ (26) ಅವರು ಠಾಣೆಯಲ್ಲಿ ನೀಡಿದ ದೂರಿನ ಪ್ರಕಾರ,  ತಾನು ಹಾಗೂ ಸ್ನೇಹಿತರಾದ ಗಜೇಂದ್ರ ಬಿಣಗೇಕರ್, ಪದ್ಮನಾಭನಗರದ ರಾಹುಲ್ ಬೆಂಗೇಂಜಾ ಮತ್ತು  ಮಹಾದೇವ ದೇವಸ್ಥಾನ ಹತ್ತಿರದ ಕೃಷ್ಣ ನಾಯ್ಕ ಸೇರಿಕೊಂಡು ಹೋಳಿ ಹಬ್ಬದ ಪ್ರಯುಕ್ತ ಸಮುದ್ರ ಸ್ನಾನ ಮಾಡಲು ಹನುಮಾನ್ ಮೂರ್ತಿ ಎದುರಿನ‌ ಬೀಚ್‌ಗೆ ತೆರಳಿದ್ದರು.

ಈ ವೇಳೆ ಖಾರ್ವಿವಾಡದ ಲೋಹಿತ್, ವೀರು @ ವೀರನ್ ಬಾನಾವಳಿ ಹಾಗೂ ಇನ್ನೊಬ್ಬ ಅವರ ಸ್ನೇಹಿತ  ಸೇರಿ ಒಟ್ಡು ಮೂವರು ಗಜೇಂದ್ರನೊಂದಿಗೆ ಇದ್ದ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಆತನನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ.

ಆಗ ಜಗಳ ಬಿಡಿಸಲು ಮುಂದಾದ ತಾನು, ರಾಹುಲ್ ಹಾಗೂ ಕೃಷ್ಣರ ಮೇಲೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ‌. ಲೋಹಿತ್ ಎಂಬಾತ ಸಿಟ್ಟಿನಿಂದ ಮರದ ಕಟ್ಟಿಗೆಯಿಂದ ರಾಹುಲ್ ಮತ್ತು ಗಜೇಂದ್ರ ಅವರ ತಲೆಗೆ ಕಟ್ಟಿಗೆ ತುಂಡಿನಿಂದ ಹೊಡೆದು ಗಾಯಪಡಿಸಿದ್ದಲ್ಲದೆ,

‘ಅನಿ ಮೇಳ್, ದಾಕೈತಾ ತುಮ್ಕಾ,  ಮಾರನ್ ಉಡೇತಾ’ ಎಂದು ಜೀವ ಬೆದರಿಕೆಯನ್ನೂ ಹಾಕಿದ್ದಾನೆ ಎಂದು ದೂರು ನೀಡಿದ್ದಾರೆ.

 ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್-2023 ರ ಕಲಂ 126(2), 115(2), 118(1), 351(2) ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.