Bhatkal| ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ₹2.49 ಲಕ್ಷ ಹಣ ಹಾಗೂ ಪಾಸ್‌ಪೋರ್ಟ್ ಪಡೆದು ವಂಚನೆ ನಡೆಸಿರುವ ಆರೋಪದಡಿ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಯ್ಕಿಣಿ ಗ್ರಾಮದ ಜನತಾ ಕಾಲೋನಿಯ ನಿವಾಸಿ, 24 ವರ್ಷದ ಅನಿಲ್ ಮಂಜಯ್ಯ ನಾಯ್ಕ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ, ಭಟ್ಕಳದ ಮಹಮದ್ ಅಯೂಬ್ ಅಲಿ, ಅಬ್ದುಲ್ ಮುತಾಲಿಬ್ ಕುಂದನಗೂಡ ಹಾಗೂ ಅಲ್ತಾಫ್ ಎಂಬ ಮೂವರು ಸೇರಿ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಅನಿಲ್ ಅವರಿಂದ ₹2.49 ಲಕ್ಷ ಹಣ ಹಾಗೂ ಪಾಸ್‌ಪೋರ್ಟ್ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಆದರೆ, ಹಣ ಮತ್ತು ಪಾಸ್‌ಪೋರ್ಟ್ ಪಡೆದ ಬಳಿಕ ಉದ್ಯೋಗ ವ್ಯವಸ್ಥೆ ಮಾಡಿಕೊಡದೇ, ನಕಲಿ ಉದ್ಯೋಗ ಸಂಬಂಧಿತ ದಾಖಲೆಗಳನ್ನು ತೋರಿಸಿ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ, ಹಣ ಮತ್ತು ಪಾಸ್‌ಪೋರ್ಟ್ ಅನ್ನು ಇದುವರೆಗೆ ಹಿಂದಿರುಗಿಸಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ತನಿಖೆ ಮುಂದುವರಿದಿದೆ.